ರಂಗ ಮಾಲಿಕೆ-13- ಸಿರಿಗೇರಿ ನಾಗನಗೌಡರು.
ಬಣ್ಣದ ಬದುಕು ರಂಗ ಮಾಲಿಕೆ- 13 ರಂಗಭೂಮಿಯ ಹಾರ್ಮೋನಿಯಂ ಚತುರ ' ಸಿರಿಗೇರಿ ನಾಗನಗೌಡರು' ಬಳ್ಳಾರಿ ರಂಗಭೂಮಿಗಾಗಿ ತಮ್ಮ ಜೀವಮಾನ ಸಾಧನೆಗೈದ ಅನೇಕ ರಂಗ ದಿಗ್ಗಜರನ್ನು ನಾವು-ನೀವೆಲ್ಲ ಮರೆತಿದ್ದೇವೆ.ಅಂತಹ ಮರೆತು ಹೋದ ಮಹನೀಯರಲ್ಲಿ ಒಬ್ಬರಾದ ರಂಗ ದಿಗ್ಗಜ,ಉಭಯ ಕಲಾ ವಿಶಾರದ ಸಿರಿಗೇರಿ ನಾಗನಗೌಡರು. ಇವರು ಬಳ್ಳಾರಿ ಜಿಲ್ಲಾ ಸಿರುಗುಪ್ಪ ತಾಲ್ಲೂಕಿನ ಸಿರಿಗೇರಿ ಗ್ರಾಮದಲ್ಲಿ 1940ರಲ್ಲಿ ತಂದೆ ಪಂಪನಗೌಡ ತಾಯಿ ಲಿಂಗಮ್ಮ ರ ಮಗನಾಗಿ ಜನಿಸಿದರು. ತಂದೆಯು ಸಹ ಹಾರ್ಮೋನಿಯಂ ಮಾಸ್ತರರಾಗಿದ್ದರಿಂದಲೇ ಗೌಡರಿಗೆ ಬಳುವಳಿಯಾಗಿ ಕಲಾಸಕ್ತಿ ಬಂದಂತಿದೆ.ಅಂತೆಯೇ ಗೌಡರು ತಮ್ಮ ಊರಿನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ 12ನೇ ವಯಸ್ಸಿನಲ್ಲಿ ಗದಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮ ವನ್ನು ಸೇರಿ ಡಾಕ್ಟರ್ ಪಂಡಿತ್ ಪುಟ್ಟರಾಜ ಗವಾಯಿಗಳ ಶಿಷ್ಯರಾಗಿ ಸಂಗೀತ ಮತ್ತು ಹಾರ್ಮೋನಿಯಂ ಶಿಕ್ಷಣವನ್ನು ಪಡೆದರು. ಅಲ್ಲದೆ ಅತಿ ಚಿಕ್ಕ ವಯಸ್ಸಿನಲ್ಲಿ ಗುರುಗಳ ಪ್ರೀತಿ ಮತ್ತು ಮಾರ್ಗದರ್ಶನದಿಂದ ಸಂಗೀತದಲ್ಲಿ ಅತ್ಯುನ್ನತ ಪರಿಣಿತಿಯನ್ನು ಪಡೆದು "ಸಂಗೀತ ವಿಶಾರದ" ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ಗಾನಯೋಗಿ ಪಂಚಾಕ್ಷರಿ ಗವಾಯಿಗಳಿಂದ ಕಟ್ಟಲ್ಪಟ್ಟ ಸಂಸ್ಥೆಗೆ ಕಳಶಪ್ರಾಯವಾಗಿ ಹೆಸರು ತಂದರು. ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಹಿಂದೂಸ್ತಾನಿ ಗಾಯನದಲ್ಲಿ ಹಾಗೂ ಹಾರ್ಮೋನಿಯಂ ವಾದನದಲ್ಲಿ ಕರತಲಮಲಕವಾಗಿ ತೊಡಗಿಸಿಕೊಂಡಿದ್ದಷ್ಟೇ ಅಲ್...