ರಂಗ ಮಾಲಿಕೆ -೨೪ ಗಡಿಭಾಗದ ಕನ್ನಡದ ರಂಗಕಟ್ಟಾಳು - ಬದಿನೆಹಾಳ್ ಭೀಮಣ್ಣನವರು
ಕ್ರಿ.ಶ.1956 ರ ನಂತರ ಕರ್ನಾಟಕಾಂಧ್ರ ವಿಭಜನೆಯಾಗಿ ನಾಡಿನ ಅನೇಕ ಗಡಿಪ್ರದೇಶಗಳು ಅನ್ಯ ಗಡಿ ರಾಜ್ಯಗಳ ಒಲ್ಲದ ಮನಸ್ಸಿನಿಂದ ಸೇರ್ಪಡೆಯಾದವು.ಈ ಮೂಲಕ ಕನ್ನಡ ಮಾತಾನಾಡುವ ಆದೋನಿ ಮತ್ತಿತರೆ ಪ್ರದೇಶಗಳು ಬಳ್ಳಾರಿಗೆ ಸೇರಬೇಕಿತ್ತಾದರೂ ತ್ಯಾಗ ಹೋರಾಟದ ಮೂಲಕ ಆಂಧ್ರದ ಪಾಲಾದವು.ಈ ಎಲ್ಲ ಸ್ಥಳಗಳಲ್ಲಿ ತೆಲುಗು ಭಾಷೆಗಿಂತ ಕನ್ನಡವೇ ಹೆಚ್ಚಾಗಿ ಬಳಸುವ ಜನರಿದ್ದರು. ಅವುಗಳಲ್ಲಿ ಆದೋನಿಯ ಬದಿನೇಹಾಳ್ ಸಹ ಒಂದು.ಇಲ್ಲಿ ಕನ್ನಡ ರಂಗಭೂಮಿಗಾಗಿ ದುಡಿದ ಊರಿನ ಹಿರಿಯರಾದ ಬ.ರ.ರಂಗನಗೌಡರು,ಅನೇಕ ರಂಗ ದಿಗ್ಗಜರ ರಂಗ ಗುರುಗಳಾದ ತಿಮ್ಮಪ್ಪ ಮಾಸ್ತರರಂತಹ ಅನೇಕ ಮಹನೀಯರಿದ್ದಾರೆ.ಇಂತವರ ಸಾಲಿನಲ್ಲಿ ನಿಲ್ಲಬಲ್ಲ ಆ ಗ್ರಾಮದ ಮತ್ತೊಬ್ಬರೆಂದರೆ ಅದು ಬದಿನೇಹಾಳ್ ಭೀಮಣ್ಣನವರು.ಇವರು ಕ್ರಿ.ಶ.01.06.1957 ರಂದು ಸೂಳೇಕೆರೆ ವೆಂಕೋಬಣ್ಣ ಮತ್ತು ಸೂಳೇಕೆರೆ ಲಕ್ಷಮ್ಮನವರ ಮಗನಾಗಿ ಕರ್ನೂಲ್ ಜಿಲ್ಲೆಯ ಆದೋನಿ ತಾಲ್ಲೂಕಿನ ಬದಿನೇಹಾಳ್ ನಲ್ಲಿ ಜನಿಸಿದರು. ಹುಟ್ಟಿದ್ದು ಆಂಧ್ರದಲ್ಲಾದರೂ ಪ್ರಾಥಮಿಕ ಹಂತದಿಂದ ಟಿ.ಸಿ.ಎಚ್ ವರೆಗೆ ಕರ್ನಾಟಕದ ಬಳ್ಳಾರಿಯಲ್ಲಿ ಮತ್ತು ರಾಯಚೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದರು.ನಂತರ 1980ರಲ್ಲಿ ಕೆ.ಲಲಿತರವರೊಂದಿಗೆ ವಿವಾಹವಾಗಿ 1983ರಲ್ಲಿ ಆಂಧ್ರದ ನದಿಚಾಗಿಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಆಯ್ಕೆಯಾದರು.ಅಲ್ಲಿಂದ 2017ರವರಗೆ ಕೌತಾಳಂ,ದೊಡ್ಡ ಹರಿವಾಣದಲ್ಲಿ ಸೇವೆ ಸಲ್ಲಿಸಿ ಸದರಿ ನಿವೃತ್ತರಾಗಿದ್ದಾರೆ.ಮೂರು ತಲೆಮಾರಿನಿಂದಲೂ ರಂಗಭೂಮಿಯ ನಂಟು ಹೊಂದಿರುವ ಈ ಕುಟುಂಬದಲ್ಲಿ ಕಲೆ ರಕ್ತಗತವಾಗಿಯೇ ಸಿದ್ದಿಸಿದೆ.ಎಲ್ಲರೂ ಅವರವರ ತಂದೆಯೊಂದಿಗೆ ಅಭಿನಯಿಸಿ ರಂಗ ಪರಂಪರೆಯನ್ನು ಉಳಿಸಿಕೊಂಡಿದ್ದಾರೆ.ಅಂತೆಯೇ ಭೀಮಣ್ಣನವರು ನಟನಾ ಪ್ರವೃತ್ತಿ ಶಾಲಾ ಹಂತದಿಂದಲೇ ಪ್ರಾರಂಭವಾಗಿ 1978ರಲ್ಲಿ ಏಕಪಾತ್ರಾಭಿನಯದ ಮೂಲಕ ಗುರುತಿಸಲ್ಪಟ್ಟು ,ಮೊದಲ ಬಾರಿಗೆ 1980ರಲ್ಲಿ ಬದಿನೇಹಾಳ್ ರಂಗನಗೌಡರು ಕಟ್ಟಿ ಬೆಳೆಸಿದ ಶ್ರೀ ಮಲ್ಲಿಕಾರ್ಜುನಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿಯ ವರನೋಡಿ ಹೆಣ್ಣು ಕೊಡು ಎಂಬ ನಾಟಕದಲ್ಲಿ ಇವರ ರಂಗ ಗುರು ತಿಮ್ಮಪ್ಪ ಮಾಸ್ತರರ ನೇತೃತ್ವದಲ್ಲಿ ಸಣ್ಣ ಪಾತ್ರದ ಮೂಲಕ ಬಣ್ಣ ಹಚ್ಚಿ ಕಲಾರಸಿಕರ ಮನಗೆದ್ದರು.ಈ ಮೂಲಕ ಆರಂಭವಾದ ರಂಗ ಪಯಣದಲ್ಲಿ ಕನಕದಾಸರು, ವಿಜಯದಾಸರು,ಪುರಂದರದಾಸ,ಶ್ರೀಕೃಷ್ಣ ದೇವರಾಯ,ಹೇಮರೆಡ್ಡಿ ಮಲ್ಲಮ್ಮ,ದಾರಿದೀಪ,ವಿದ್ಯಾವತಿ,ಗೌರಿ ಗೆದ್ದಳು,ಗೌಡ್ರ ಗದ್ಲ, ನರ್ತಕಿ ನಾಯಕಿ, ವಾತ್ಸಲ್ಯ,ದೇವಿ ಮಹಾತ್ಮೆ,ಕವಿಖೈದಿಯಾದ ಹೀಗೆ ಸುಮಾರು 600 ಕ್ಕೂ ಹೆಚ್ಚಿನ ಐತಿಹಾಸಿಕ, ಪೌರಾಣಿಕ, ಸಾಮಾಜಿಕ ನಾಟಕ ಪ್ರಯೋಗ,ಹತ್ತಾರು ಪ್ರಶಸ್ತಿ ಪುರಸ್ಕಾರಗಳನ್ನು ಕಾಣಬಹುದಾಗಿದೆ.ರತ್ನ ಮಾಂಗಲ್ಯದಲ್ಲಿ ರಂಜನಾಗಿ, ಅಣ್ಣ ತಂಗಿಯಲ್ಲಿ ಖಾಸಿಂನಾಗಿ,ಕುರುಕ್ಷೇತ್ರ ಮತ್ತು ರಕ್ತರಾತ್ರಿಯಲ್ಲಿ ದುರ್ಯೋಧನ,ಕನಕದಾಸದಲ್ಲಿ ಕನಕದಾಸರಾಗಿ,ಟಿಪ್ಪು ಸುಲ್ತಾನನಾಗಿ, ಬಯಲಾಟದ ಶಚಿಯಾಗಿ,ಅಲ್ಲೂರಿ ಸೀತಾರಾಮನಾಗಿ,ಶಕುನಿಯಾಗಿ ಆಂಧ್ರಪ್ರದೇಶ,ತೆಲಂಗಾಣ, ಕರ್ನಾಟಕ ಹಾಗೂ ಮಹಾರಾಷ್ಟ್ರ ಬಹುತೇಕ ನಾಲ್ಕು ರಾಜ್ಯಗಳ ತುಂಬೆಲ್ಲ ಸಂಚರಿಸಿ,ಸುಮಾರು 10 ನಾಟಕ ತಂಡಗಳಲ್ಲಿ ತಮ್ಮ ಅದ್ಭುತವಾದ ಅಭಿನಯದಿಂದಾಗಿ ಖ್ಯಾತಿ ಗಳಿಸಿದ್ದಾರೆ. ಈ ಮೂಲಕ ಚಲನಚಿತ್ರ ನಟರಾದ ಸುದೀರ್,ಡಿಂಗ್ರಿ ನಾಗರಾಜ್,ರಾಮಕೃಷ್ಣ, ರಮೇಶ್ ಭಟ್ ಮುಂತಾದ ಷತವರೊಂದಿಗೆ ಚಂದನ ವಾಹಿನಿಯ ದಾಸನಾಗು ವಿಶೇಷನಾಗು ಎಂಬ ಧಾರಾವಾಹಿ ಹಾಗೂ ವಿಜಯದಾಸರು, ಹೇಮರೆಡ್ಡಿ ಮಲ್ಲಮ್ಮ,ಅಕ್ಕ ಮಹಾದೇವಿ ಮರೋಜನ್ಮಂ ಎಂಬ ಕಿರುಚಿತ್ರಗಳ ಮೂಲಕ ನಟನ ಸಖ್ಯ ಹೊಂದಿದ್ದಾರೆ.ಹೀಗೆ ಸ್ತ್ರೀ ಪುರುಷ ಪಾತ್ರಗಳ ಮೂಲಕ ಇಡೀ ನಾಡಿನಾದ್ಯಂತ ಕನ್ನಡದ ಕಂಪನ್ನು ಪಸರಿಸಿದ ಭೀಮಣ್ಣನವರಿಗೆ ಎಲಿವಾಳ ಸಿದ್ದಯ್ಯಸ್ವಾಮಿ ಪ್ರಶಸ್ತಿ, ಬಳ್ಳಾರಿ ರಾಘವ ಜಿಲ್ಲಾ ಪ್ರಶಸ್ತಿ,ಹಾಸ್ಯ ಚಕ್ರವರ್ತಿ,ಇದಲ್ಲದೇ ಅಕ್ಷರ ದೀಪ ಕಾರ್ಯಕ್ರಮದ ನಾಯಕರಾಗಿ ಅಕ್ಷರ ಜಾಥಾ ಬೀದಿ ನಾಟಕಗಳ ಮೂಲಕ ಹಳ್ಳಿ ಹಳ್ಳಿಗೂ ಸಂಚರಿಸಿ ಶಿಕ್ಷಣ ಮತ್ತು ರಂಗಭೂಮಿ ಮಹತ್ವ ಸಾರಿದ್ದರಿಂದ ಕರ್ನೂಲ್ ಡಿ.ಸಿಯವರಿಂದ ಆದರ್ಶ ಶಿಕ್ಷಕ ಮತ್ತು ಉತ್ತಮ ನಟ ಪ್ರಶಸ್ತಿ,ತಮ್ಮ ಏಕಪಾತ್ರಾಭಿನಯಕ್ಕಾಗಿ ಅನೇಕ ರಾಜಕೀಯ,ಶೈಕ್ಷಣಿಕ ಕ್ಷೇತ್ರದ ಗಣ್ಯರಿಂದ ಬಿರುದು ಸನ್ಮಾನಗಳನ್ನು ಹೊಂದಿದ್ದಾರೆ.ಹೀಗೆ ತಾತ ಹಾಕಿದ ರಂಗ ಪರಂಪರೆಯ ಮರವನ್ನು ಈಗಾಗಲೇ ತಂದೆಯವರಿಂದಲೇ ಅಭಿನಯದ ಪಟ್ಟುಗಳನ್ನು ಅರಿತ ಇವರ ಮಗ ವೆಂಕಟ ಪ್ರವೀಣರು ನೀರೆರೆದು ಬೆಳಸುವ ಜವಾಬ್ದಾರಿ ಹೊತ್ತಿದ್ದಾರೆ.ಈ ನಿಟ್ಟಿನಲ್ಲಾದರೂ ಎಲ್ಲೋ ಕರ್ನಾಟಕಾಂಧ್ರದ ಗಡಿ ಭಾಗದಲ್ಲಿ ಎಲೆ ಮರೆ ಕಾಯಿಯಂತೆ ರಂಗ ಕೈಂಕಾರ್ಯದ ಮೂಲಕ ಕನ್ನಡವನ್ನು ಉಳಿಸಿ ಬೆಳೆಸುತ್ತಿರುವ ಈ ಹಿರಿಯ ಜೀವವನ್ನು ಪುರಸ್ಕರಿಸುವ ಚಿಕ್ಕ ಪ್ರಯತ್ನವೇ ಈ ಪುಟ್ಟ ಲೇಖನ.

Comments
Post a Comment