ಬಳ್ಳಾರಿಯ ವೃತ್ತಿ ರಂಗಭೂಮಿ ಇತಿಹಾಸದಲ್ಲಿ ಹಚ್ಚಳಿಯದ ಹೆಸರಾದ ಸುಭದ್ರಮ್ಮ ಮನ್ಸೂರ್, ವೀಣಾ ಆದೋನಿ,ಸುಜಾತಮ್ಮ, ಚಾಮುಂಡಿಯಂತಹ ಅನೇಕ ಮಹಿಳಾ ರಂಗ ಕಲಾವಿದರಿದ್ದಾರೆ. ಆದರೆ ಅವರ ನಂತರ ಸ್ತ್ರೀ ಕಲಾವಿದರನ್ನು ಕಾಣಲಾಗದೆ ಪ್ರಸ್ತುತ ಜಿಲ್ಲೆಯ ರಂಗಭೂಮಿ ಸ್ತ್ರೀ ಕಲಾವಿದರ ಕೊರತೆ ನೀಗಿಸುವಲ್ಲಿ ವಿಫಲವಾಗಿದೆ ಎಂದು ವೃತ್ತಿ ರಂಗಭೂಮಿ ಕಲಾವಿದೆ ಬಯಲಾಟ ಉಷಾರಾಣಿ ಅಭಿಪ್ರಾಯ ಪಟ್ಟರು.
ಬೈರಗಾಮದಿನ್ನೆಯಲ್ಲಿ ಕಾರಂತ ರಂಗಲೋಕ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡ ರಂಗ ಪಲ್ಲಕ್ಕಿ -೨೦೧೮ ಉತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಾ ಪ್ರತಿಯೊಬ್ಬ ಕಲಾವಿದನ ಬದುಕಿನ ಶೈಲಿ ಆಯಾ ಕಲೆಯ ಏಳ್ಗೆಯ ವ್ಯಾಪ್ತಿಯನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ ಒಂದನ್ನೊಂದು ಕಾಲದಲ್ಲಿ ಕಲಾರಸಿಕರ ಮನತಣಿಸಿ ಮನೋರಂಜನೆಯ ರಸದೂಟ ಬಡಿಸಿದ ನನಗೆ ಇಂದು ಒಂದೊತ್ತಿನ ಊಟಕ್ಕೂ ಪರದಾಡುವಂತಾಗಿದೆ.ಆದರೂ ನಾನು ರಂಗಭೂಮಿಯನ್ನು ಮೂದಲಿಸಿಲಿಲ್ಲ ಬದಲಾಗಿ ಎದೆಗವಚಿಕೊಂಡು ಪ್ರೀತಿ ಮಾಡಿದ್ದೇನೆ.ಕಲೆ ಯಾವುದೇ ಸಂದರ್ಭಗಳನ್ನಾಗಲಿ ಧೃತಿಗೆಡದೆ ಧೈರ್ಯದಿಂದ ಎದುರಿಸುವ ಮನೋಸ್ಥೈರ್ಯವನ್ನು ತುಂಬುತ್ತಿದೆ.ಅದೇ ನನ್ನನ್ನೂ ಈ ಹಂತಕ್ಕೆ ತಂದು ನಿಲ್ಲಿಸಿದೆ ಎಂದರು.ನಂತರ ರಂಗಕರ್ಮಿ ಗುಬ್ಬಿಹಾಳ್ ಗೋಪಾಲರೆಡ್ಡಿ ಮಾತನಾಡಿ ಕಲೆಯು ಕೇವಲ ಹೆಸರು ತಂದುಕೊಡಬಹುದು ಆದರೆ ಹೊಟ್ಟೆ ಪೊರೆಯಲಾರದು ಎಂದು ಕೈಕಟ್ಟಿ ಕೂರುವುದರಲ್ಲಿ ಅರ್ಥವಿಲ್ಲ. ಮೇಲಾಗಿ ಕಲೆಯೆಂಬುದು ಅದೊಂದು ಪರೋಪಕಾರದ ಕಾರ್ಯ ಅದನ್ನು ಪೂರ್ಣ ಮನಸ್ಸಿನಿಂದ ಮಾಡಿದವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ನುಡಿದರು. ತದನಂತರ ಮಾತಾನಾಡಿದ ಸಂಸ್ಥೆಯ ಕಾರ್ಯದರ್ಶಿ ಆರ್.ಪಿ. ಮಂಜುನಾಥ್. ಬಿ.ಜಿ.ದಿನ್ನೆ ಕಲೆಯ ತವರೂರು ಎನಿಸಿದ ಗ್ರಾಮೀಣ ಭಾಗದಲ್ಲೂ ಸಿನಿಮಾ,ಧಾರಾವಾಹಿಗಳ ಭರಾಟೆಯಿಂದ ರಂಗಭೂಮಿ ಸೊರಗುತ್ತಿದೆ ಎಂಬುದು ಶುದ್ಧ ಸುಳ್ಳು ಏಕೆಂದರೆ ಗುಣಮಟ್ಟದ ಮತ್ತು ಜನರನ್ನು ತಲುಪುವಂತಹ ಕಾರ್ಯಕ್ರಮಗಳಿದ್ದಲ್ಲಿ ಕಲೆಯ ವಿನಾಶ ಅಸಾಧ್ಯ.ಅಂತಹ ಗುಣಮಟ್ಟದ ಸಮಾಜಮುಖಿ ಕಾರ್ಯಕ್ರಮಗಳ ಆಯೋಜನೆಯಲ್ಲಿ ನಮ್ಮ ಸಂಸ್ಥೆ ಮುನ್ನೆಡೆದಿದೆ ಎಂದು ಪ್ರಸ್ತಾಪಿಸಿದರು. ಇದೇ ಸಂದರ್ಭದಲ್ಲಿ ರಂಗ ಗೀತೆ ಗಾಯನ ನೆಡೆಸಿದ ಬಯಲಾಟ ಉಷಾರಾಣಿಯವರಿಗೆ ಈ ವರ್ಷದ " ಕಾರಂತ ರತ್ನ" ಪ್ರಶಸ್ತಿಯನ್ನು ನೀಡಲಾಯಿತು.ಅಲ್ಲದೇ ಥಿಯೇಟರ್ ಸಮೂರಾಯ್ ವತಿಯಿಂದ ಮದುವೆ ಹೆಣ್ಣು ನಾಟಕವನ್ನು ಪ್ರಸ್ತುತ ಪಡಿಸಲಾಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಹೆಚ್.ಕೆ.ನರಸನಗೌಡ,ರಂಜಿತಾ ಜಾಧವ್,ಬಯಲಾಟ ಶೇಖಣ್ಣ ,ಆರ್.ದೇವರಾಜ್,ಆರ್.ಭೀಮನಗೌಡ,ಶರಭನಗೌಡ ಮತ್ತಿತರಿದ್ದರು.ಆರ್.ಪಿ.ಈಶಪ್ಪ ಸ್ವಾಗತಿಸಿದರು,ಡಿ.ಎಂ.ಯಲ್ಲಪ್ಪ ನಿರೂಪಿಸಿದರು.ಆರ್.ಚನ್ನನಗೌಡ ವಂದಿಸಿಸಿದರು.

Comments
Post a Comment